ಸಮಾಜದಲ್ಲಿ ಮೊದಲಿನಿಂದಲೂ ಬಡವರ, ಕೂಲಿಕಾರರ, ನಿರ್ಗತಿಕರ ಬಗ್ಗೆ ತಾರತಮ್ಯ ಧೋರಣೆ ಎದ್ದು ಕಾಣುತ್ತದೆ. ಉಳ್ಳವರು ದುರ್ಬಲರ ಶ್ರಮವನ್ನಾಗಲಿ, ಪ್ರತಿಭೆಯನ್ನಾಗಲಿ ಗೌರವಿಸದೆ ಅವರ ಪರಿಶ್ರಮದಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಾರೆ. ಶೋಷಿತರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಹೇಗೆ ಪ್ರತಿರೋಧ ವ್ಯಕ್ತವಾಗುತ್ತದೆ ಎನ್ನುವುದು ಈ ಕತೆಯಲ್ಲಿ ಅನಾವರಣಗೊಂಡಿದೆ.
ಮನುಷ್ಯನ ಭಾವನೆಗಳು ಹೊಳೆಗೂ ಇರುವಂತೆ ಹೊಳೆಯ ಪಾತ್ರವನ್ನು ಸಕ್ರಿಯವಾಗಿ ತಂದಿದ್ದಾರೆ. ಕರಾವಳಿ ತೀರದ ಬಡವರ ಬದುಕು, ಅವರ ಅಸಹಾಯಕತೆ ಹಾಗೂ ಆಡುಭಾಷೆಯ ಸೊಗಸು ಮನೋಜ್ಞವಾಗಿ ಕತೆಯ ಉದ್ದಕ್ಕೂ ಗಮನ ಸೆಳೆಯುವಂತಿದೆ. ಸಣ್ಣ ಕತೆಯ ಮುಖ್ಯ ಲಕ್ಷಣವಾದ ಆಕರ್ಷಕ ಶೈಲಿ, ಯಾರು ಊಹಿಸದ ಅಂತ್ಯ ಈ ಕತೆಗೆ ಮೆರಗನ್ನು ತಂದಿದೆ. ಕರಾವಳಿಯ ಬದುಕಿನ ವಿವರಗಳೊಂದಿಗೆ ಈ ಕತೆ ಹೃದಯಂಗಮವಾಗಿ ನಿರೂಪಿತವಾಗಿದೆ.
ಎಚ್. ನಾಗವೇಣಿಯವರು ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಹೊನ್ನಕಟ್ಟೆಯಲ್ಲಿ 29-11-1962 ರಂದು ಜನಿಸಿದರು. ಕರಾವಳಿಯ ಸಾಂಸ್ಕೃತಿಕ ವಿಭಿನ್ನತೆಯ ಹಿನ್ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪಲ್ಲಟಗಳನ್ನು ಶೋಧಿಸುವ ಉತ್ತಮ ಕಥೆಗಳನ್ನು ನೀಡುತ್ತ ಡಾ. ಎಚ್. ನಾಗವೇಣಿ ಸಾಹಿತ್ಯಲೋಕದ ಗಮನ ಸೆಳೆದಿದ್ದಾರೆ. ವಿಜ್ಞಾನ, ಗ್ರಂಥಾಲಯ ವಿಜ್ಞಾನ, ಸಾಹಿತ್ಯ ಮತ್ತು ಶಿಕ್ಷಣ ಇವೆಲ್ಲದರಲ್ಲಿ ಪದವಿಗಳನ್ನು ಪಡೆದಿರುವ ಅವರು, ಈಗ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಗ್ರಂಥಾಲಯದ ಮುಖ್ಯ ಗ್ರಂಥಪಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಕಟಿತ ಕೃತಿಗಳು- ನಾಲ್ಕನೇ ನೀರು, ಮೀಯುವ ಆಟ, ಕಡಲು, ವಸುಂಧರೆಯ ಗ್ಯಾನ, ಸೂರ್ಯನಿಗೊಂದು ವೀಳ್ಯ (ಕಥಾ ಸಂಕಲನಗಳು), ಗಾಂಧಿ ಬಂದ (ಕಾದಂಬರಿ), ಕೊಡಗಿನ ಗೌರಮ್ಮ ನವೋದಯದ ಕಥನಗಾರ್ತಿ ಗೌರಮ್ಮ, ರಂಗಸಂಪನ್ನ (ಜೀವನಚಿತ್ರಗಳು), ಸಾರ ವಿಸ್ತಾರ, ತಿಳಿರು ತೋರಣ (ವಿಮರ್ಶೆ) ಇತ್ಯಾದಿ