https://www.prajavani.net
ಚೆನ್ನುಡಿ
ವಿಜಯಪುರ ಹಣ್ಣುಗಳ ಬಟ್ಟಲಾಗಿದ್ದು ಹೇಗೆ? ನಿಂಬಿಯಾ ಬನದ ಮ್ಯಾಗ ಚಂದ್ರ ಚಂಡಾಡಿದಂತೆ, ನಾವು ಕೈಕಾಲಾಡಿಸಿದರೂ ಏನಾಗಬಹುದು, ವಿಜಯಪುರದ ಜವಾರಿ ಭಾಷೆಯಲ್ಲಿ ಕೇಳಿ, ಜುಲೈ03 ಸುಧಾ ಸಂಚಿಕೆಯ ಚೆನ್ನುಡಿ ಸರಣಿಯಲ್ಲಿ. ಓದುತ್ತಿರುವವರು ನಟಿ, ಲೇಖಕಿ ಜಯಲಕ್ಷ್ಮಿ ಪಾಟೀಲ––––
ಈಗಿದು ಬರದ ನಾಡಲ್ಲ
‘ಇವತ್ತ ನಿಂಬಿಕಾಯಿ ಆಯ್ಬೇಕು. ಯೋಳೆಂಟು ಡಾಗಾಗುವಷ್ಟು ಹಣ್ಣಿಗೆ ಬಂದಾವ. ಪಂಡಿತ, ನಾಳೆ ಮುಂಜಾನಿ ಆರರ ಲೋಕಲ್ಕ (ಟ್ರೇನ್) ವಿಜಾಪುರಕ್ಕ ಹೋಗಿ ಅಡತಿಗೆ ಹಾಕಿ, ಸಂಜಿ ನಾಕರ ಲೋಕಲ್ಲಿಗೆ ಹೊಡಮಳ್ಳಿ ನಿಂಬಾಳದಾಗಿರ್ಬೇಕ್ ನೀ. ಏ ಹೋಗ್ರಿನ್ನ ಎಲ್ಲಾ ಹುಡುಗೂರು, ಹೋಗಿ ದೊಡ್ಡೋರು ಜತಿಗೆ ಕಾಯಿ ಆಯ್ರಿ’ ಹಿಂಗ ಅವರಾದಿ ಲಕ್ಷ್ಮಣ್ ಮಾಸ್ತರ್ರು ಅಂದ್ರ ನಮ್ಮುತ್ತ್ಯಾ, ಕಟ್ಟಿ ಮ್ಯಾಲೆ ವಿ ಶೇಪಿನ್ಯಾಗ ಕಾಲ್ ಮ್ಯಾಲೆ ಕಾಲ್ ಮಡಚಿ ಹಾಕಿ ಕುಂತು ಹೇಳಿದ್ರ, ಒಲ್ಲ್ಯಾ ಅನ್ನು ಧೈರ್ಯಾ ಚಿಳ್ಳ್ಯಾಪಿಳ್ಳ್ಯಾ ಇದ್ದ ನಾವು ಯಾ ಮೊಮ್ಮಕ್ಕಳಿಗೂ ಇರ್ಲಿಲ್ಲನ್ನ್ರಿ.
ಎರಡ್ನೂರ್ ಬಾಳಿಗಿಡ ಇದ್ದ ಪಡಕ್ಕ ಹೋಗ್ರಿ ಅಂದ್ರೂ ಹಿಂಗ ಅಂಜತಿದ್ದ್ವಿ. ಯಾಕಂದ್ರ ಅದರ ಒಳಗ ಹೊಕ್ಕರ ಸಾಕು, ಅವು ಎಂಥಾ ಹುಳಾನೋ (ಸೊಳ್ಳೆ) ಏನೋ ಕಡದ್ರ ಮೈಮ್ಯಾಲೆ ನಾಲ್ಕಾಣಿಯಷ್ಟು ಅಗಲ ಗಾದ್ರಿ ಏಳ್ತಿದ್ವು. ನಾವೆಲ್ಲ ತುರಸ್ಕೊಳ್ಳೂದ ತುರಸ್ಕೊಳ್ಳೂದು ಮೈಯೆಲ್ಲಾ. ಆದ್ರ ಮಜಾ ಅಂದ್ರ ನಮ್ಮುತ್ತ್ಯಾರಿಗೆ ಮಾತ್ರ, ಅವ್ರು ಬಾಳಿಪಡದಾಗ ಎಷ್ಟೊತ್ತಿದ್ದ್ರೂ ಒಂದs ಒಂದು ಹುಳಾನೂ ಕಡಿತಿದ್ದಿಲ್ಲ! ಜವಾರಿ ಬಾಳಿಹಣ್ಣು ನಮ್ಮಲ್ಲಿ. ಹಣ್ಣಾದ್ರ ಹಂಗ ಗಟ್ಟಿಬಂಗಾರ ನೋಡಿದಂಗ ಆಕ್ಕತಿ ಅಂಥಾ ಹಳದಿ ಬಣ್ಣ. ಭಾಳ ರುಚಿ ಖರೇ, ಆದ್ರ ಪಡದ ಒಳಗ ಹೋಗೂದು ಅಂದ್ರ, ಹುಳಾ ಕಡೀದನs ಮೈ ತುರಸಾಕ ಚಾಲು ಆಕ್ಕಿತ್ತು! ಆದ್ರ ಅದೇ ಅರಣಿವಟ್ಟಿಗೆ (ದಿಬ್ಬ) ಹೋಗಿ, ಅಲ್ಲಿ ಸಾsಲ್ಕ ಇದ್ದ ನಾಲ್ವತ್ತು, ಐವತ್ತು ಮಾವಿನಗಿಡ ಕಾಯ್ರಿ ಅಂದ್ರ ನಮಗೆಲ್ಲಾ ಭಾರಿ ಖುಷಿ. ಅದರಾಗ ಅರ್ಧ ನಮ್ಮ ದೊಡ್ಡ ಮುತ್ತ್ಯಾರ ಪಾಲಿಗೆ ಹೋಗಿದ್ವು.
ಇಬತ್ತಿ ಮಾವು, ಗುಟ್ಲಿಮಾವು, ಸಬ್ಬಸಿಮಾವು, ಸಕ್ಕ್ರಿಮಾವು, ಕ್ವಾಣ್ಯಾ ಮಾವು, ಚಂದ್ರಮಾವು, ಉಪ್ಪಿನಕಾಯಿ ಮಾವು ಹಿಂಗ ಕನಿಷ್ಟ ಹದಿನೈದು ಇಪ್ಪತ್ತು ವರೈಟಿ ಮಾವಿನ ಹಣ್ಣಿರೊ ಮರಗೊಳವು. ಪಾಡಗಾಯಿ ಬಿದ್ರ ಆಯ್ಕೊಂಡು ತಿನ್ನಬೋದು ಅಂತ ಆಶೆಬುರಕತನಾ. ಅದಕ್ಕ ಅರಣಿಗೆ ಹೋಗ್ರಿ ಅಂದ್ರ ಜಿಕ್ಕೋತ ಹೋಕಿತ್ತು ನಮ್ಮ ಟೋಳಿ. ಆದ್ರ ನಿಂಬಿಬನಾ ಅಂದ್ರ ಅಂಜ್ಕಿ. ಬಾಜಾರದಾಗಿನ ಕಾಯ್ಪಲ್ಲೇದೋರ ಛತ್ರಿ ಹಂಗ, ಇಷ್ಟಗಲ ಹರಡ್ಕೊಂಡು ನಿಂತ ನಿಂಬಿ ಗಿಡಗೊಳ ತುಂಬ ಮುಳ್ಳs ಮುಳ್ಳು! ಮುನ್ನೂರು ನಿಂಬಿ ಗಿಡಾ ಇರೊ ಬನದಾಗ ಹಾದು ಹೊರಗ ಬರೂದು ಅಂದ್ರ, ಯುದ್ಧದಾಗಿನ ಬಾಣ ತಪ್ಪಸ್ಕೋತ ತಪ್ಪಸ್ಕೋತ, ಒನ್ನಾಕರ ಮೈ ಕೈಗೆ ಚುಚ್ಚಸ್ಕೊಂಡ ಹೊರಗ ಬಂದಂಗ ಲೆಕ್ಕ! ಕೈ ಕಾಲೆಲ್ಲ ತೆರಚಿ ಚುರುಚುರೂ ಅನ್ನೂವು.
‘ನಿಂಬಿಯ ಬನದ ಮ್ಯಾಗಳ ಚಂದ್ರಮ ಚಂಡಾಡಿದ’ ಅಂತ ಯಾ ಪುಣ್ಯಾತ್ಮರು ಹಾಡ ಕಟ್ಟಿದ್ರೋ, ಯಾಕ ಕಟ್ಟಿದ್ರೋ ಅವ್ರಿಗೇ ಗೊತ್ತು! ಮುಗಲಾಗಿನ ಚಂದಪ್ಪ ಕೆಳಗ ಬರೂದಿಲ್ಲ ಅನ್ನೊ ಖಾತ್ರಿ ಇದ್ದs ಹಂಗಂದಿರ್ಬೇಕು. ಇಲ್ಲಾ, ಅವ್ರು ಯಾವತ್ತೂ ನಿಂಬಿ ಬನ ಹೊಕ್ಕ ಬಂದಂಗ ಕಾಣಂಗಿಲ್ರಿ, ಇಲ್ಲಿಕ್ರ ಚಂಡಾಡೊ ಚಂದ ಗೊತ್ತಾಗಿರೂದು.
ನಿಂಬಿಹಣ್ಣು ಅಂದ್ರ ನಮ್ಮೂವು ಅಂತಿಂಥಾ ನಿಂಬಿಹಣ್ಣಲ್ಲ, ಹಂಗಂದ್ರ ದಮ್ಮ ದಪ್ಪನ್ನ ಹಣ್ಣಲ್ಲ, ತೆಳ್ಳನ ಸಿಪ್ಪಿ ಒಳಗ ಹೊಟ್ಟಿ ತುಂಬಾ ಭರ್ಚೇಕ್ ರಸಾ ತುಂಬ್ಕೊಂಡಿರೊ ನಿಂಬಿಹಣ್ಣು. ಮಣಿಪುರದ ‘ಕಚೈ ನಿಂಬು’ ನಂತ್ರ ಜಿಐ (GI–Geographical Indication) ಟ್ಯಾಗ್ ಪಡ್ಕೊಂಡ ಎರಡನೇ ನಿಂಬಿಹಣ್ಣ್ ಅಂದ್ರ ನಮ್ಮ ಇಂಡಿಯ ಕಾಜ್ಗಿ ನಿಂಬಿಹಣ್ಣು. ವಲ್ಡ್ ಫೇಮಸ್ಸು! ಬಿಜಾಪುರ ಅಂದ್ರ, ಈಗೇನ್ ವಿಜಯಪುರ ಅಂತೀವಲ್ಲ ಅದು ನಮ್ಮ ಜಿಲ್ಲಾ. ಇಂಡಿ ಅದರದ್ದ ಒಂದು ತಾಲ್ಲೂಕು. ನನ್ನ ತವರು ಇಂಡಿ ತಾಲ್ಲೂಕಿನ ನಿಂಬಾಳ. ಭಾಳ ಮಾಡಿ ನಿಂಬಿ ಬೆಳಿಯೊ ಊರು (ಹಾಳ= ಇರುವುದು) ಅನ್ನೂದಕ್ಕನ ನಿಂಬಾಳ ಅಂತ ಹೆಸರು ಬಂದೇತೇನೋ ನಮ್ಮೂರಿಗೆ. ಇಡೀ ಜಿಲ್ಲಾದಾಗ ಅದರಾಗೂ ಹೆಚ್ಚಾಗಿ ಇಂಡಿ ತಾಲ್ಲೂಕಿನ್ಯಾಗ ನಿರಾವರಿ ಒಕ್ಕಲತನ ಇದ್ದೋರೆಲ್ಲಾ ನಿಂಬಿಹಣ್ಣು ಬೆಳಿತಾರ. ಎಕ್ಸ್ಪೋರ್ಟ್ ಆಕ್ಕಾವಿವು.
ಈ ಇಂಡಿಯ ಕಾಜ್ಗಿ ನಿಂಬಿಹಣ್ಣು ಹೆಂಗಂದ್ರ, ಅದರ ಒಂದ್ ಹನಿ ರಸಾ ನೀವು ಬಾಯಿಗೆ ಬಿಟ್ಕೊಂಡ್ರಿ ಅಂದ್ರ, ಅದರ ಹುಳಿಗೆ ಚಿಲ್ಲ್ ಅಂತ ನಿಮ್ಮ ಬಾಯಿಂದ ಲಾಲಾರಸದ ಕಾರಂಜಿ ಹೊರಗ ಚಿಮ್ಮತೈತಿ. ಹಲ್ಲಿಗೆ ರಸಾ ಹತ್ತ್ರಿದ್ರ ಚುಳ್ ಅಂತಾವು ಹಲ್ಲು. ಆಮ್ಯಾಲೆ ನೋಡ್ರಿ ನಾಲ್ಗಿ ಪೂರಾ ಸಿಹಿ ಸಿಹಿ. ನನ್ನ ತವರಿಂದ ಯಾರ್ ಬಂದ್ರೂ ತಪ್ಪದ ನಾಲ್ವತ್ತು ಐವತ್ತು ನಿಂಬಿಹಣ್ಣು ಚೀಲದಾಗ ಹಾಕ್ಕೊಂಡ ಬರ್ತಾರ ನಮ್ಮಲ್ಲಿಗೆ. ಹಿಂಗಾಗಿ ನಾವು ಹೊರಗ ಕೊಂಡ್ಕೊಳ್ಳೂದು ಕಮ್ಮಿ. ದುಂಡಗ ಸಾಧಾರಣ ಮೈಕಟ್ಟಿನ್ವು. ಆದ್ರ ರಸಾ ಅಸಾಧಾರಣ. ಹಣ್ಣು, ಮ್ಯಾಲೆ ಒಣಗಿ ಮುದುಡ್ಯಾಗಿದ್ದ್ರೂ ಒಳಗಿನ ರಸಾ ಇಂಗಿರಂಗಿಲ್ಲ. ಹಿಂಗಾಗಿ ಒಣಗ್ಯಾವು ಕಸಕ್ಕ ಹಾಕ್ರಿ ಅನ್ನು ಮಾತs ಇಲ್ಲ. ಅನ್ನ ಬ್ಯಾಳಿ ಕುದಸೂ ಮುಂದ, ನೀವು ಹಿಂಡಿದ ನಿಂಬಿಹಣ್ಣಿನ ಸಿಪ್ಪಿನ (ಯಾವ ತಳಿದಾದ್ರೂ ಅಡ್ಡಿಯಿಲ್ಲ) ಕುಕ್ಕರ ತಳದಾಗಿನ ನೀರಾಗ ಹಾಕಿದ್ರ, ಕುಕ್ಕರ್ ಒಳಗಿನ ಬಾಜು ಫಳಾಫಳ ಅಂತತಿ. ಟ್ರೈ ಮಾಡಿ ನೋಡ್ರಿ ಬೇಕಿದ್ರ.
‘ಕೈಗೆಟುಕದ ದ್ರಾಕ್ಷಿ ಹುಳಿ’, ‘ದಾಳಂಬ್ರಿ (ದಾಳಿಂಬೆ) ಅಂಥಾ ಹಲ್ಲು’ ಅಂತನ್ನೂದನ್ನ ಕೇಳೂದೇನು ನೀವೂ ಭಾಳಷ್ಟು ಸಲ ಅಂದಿರ್ತೀರಿ. ಈ ದ್ರಾಕ್ಷಿ ಮತ್ತ ದಾಳಂಬ್ರಿಗೂ ನಮ್ಮ ಜಿಲ್ಲಾ ಫೇಮಸ್ಸು ಅನ್ನೂದನ್ನ ನಾ ಏನ್ ಮತ್ತ ಪ್ರತ್ಯೇಕ ಹೇಳಬೇಕಾಗಿಲ್ಲ ನಿಮಗ ಅಲ್ಲಾ? ಮಜಾ ಅಂದ್ರ ಸಣ್ಣಾಕಿದ್ದಾಗ, ‘ದಾಳಂಬ್ರಿ ಕೆಂಪಗಿರ್ತಾವ, ಅದನ್ನ್ಯಾಕ ಬೆಳ್ಳನ ಹಲ್ಲಿಗೆ ಹೋಲಸ್ತಾರ?!’ ಅಂತ ತಲಿ ಕೆಡಸ್ಕೊಂಡಿದ್ದೆ
ದಾಳಂಬ್ರಿನ ದೊಡ್ಡ ಪ್ರಮಾಣದಾಗ ಬೆಳೀತಾರ ನಮ್ಕಡಿ ರೈತರು. ಅವು ಬ್ಯಾರೆ ದೇಶಕ್ಕೆಲ್ಲಾ ರಫ್ತ್ ಆಕ್ಕಾವಂತ ಗೊತ್ತು. ಅದಕ್ಕಿನ್ನ ಹೆಚ್ಚಿನ ಮಾಹಿತಿ ಇಲ್ಲ ನನಗ.
ಅಕ್ಕಾ ಅಕ್ಕಾ ಬಳ್ಳಿ ನೋಡ
ಬಳ್ಳಿ ತುಂಬ ಗಿಣಿ ನೋಡ
ತಿಂದೋರ ಬಾಯಿ ನೋಡ!